ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ
<< ಕೃಷ್ಣನ ಅದ್ಭುತ ಲೀಲೆ: ಕುಡಕ್ಕೂತ್ತು (ಮಡಕೆ ಕುಣಿತ)
ಕೃಷ್ಣನು ವೃಂದಾವನದಲ್ಲಿ ವಾಸಿಸುತ್ತಿದ್ದಾಗ, ಕಂಸನು ಕೃಷ್ಣನನ್ನು ಕೊಲ್ಲಲು ಕಳುಹಿಸಿದ ಇನ್ನೂ ಕೆಲವು ಅಸುರರು ಒಬ್ಬೊಬ್ಬರಾಗಿ ಬಂದರು. ಕೃಷ್ಣನು ಅವರೆಲ್ಲರನ್ನೂ ಸುಲಭವಾಗಿ ಸಂಹರಿಸಿದನು. ನಾವೀಗ ಆ ಲೀಲೆಗಳನ್ನು ಆನಂದಿಸೋಣ.
ಅರಿಷ್ಟಾಸುರ ವಧೆ: ಅರಿಷ್ಟಾಸುರನು ಕೃಷ್ಣ ಮತ್ತು ಬಲರಾಮನನ್ನು ಕೊಲ್ಲುವ ತೀವ್ರ ಕೋಪದೊಂದಿಗೆ, ಒಂದು ಕ್ರೂರವಾದ, ದೊಡ್ಡ ಹೋರಿಯ (ಗೂಳಿ) ರೂಪದಲ್ಲಿ ಬಂದನು. ಅವನು ಕೃಷ್ಣನ ಕಡೆಗೆ ವೇಗವಾಗಿ ನುಗ್ಗಿ ಬಂದಾಗ, ಕೃಷ್ಣನು ಅವನ ಕಾಲುಗಳನ್ನು ಹಿಡಿದು, ಮೇಲೆ ಎಸೆದು ನೆಲಕ್ಕೆ ಅಪ್ಪಳಿಸಿ ಕೊಂದನು.
ಕೇಶಿ ವಧೆ: ಕೇಶಿ ಎಂಬ ರಾಕ್ಷಸನು ಬೃಹತ್ ಕುದುರೆಯ ರೂಪದಲ್ಲಿ ಬಂದನು. ಇದನ್ನು ಕಂಡ ನಾರದರು, “ಕೃಷ್ಣ ಇವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಭಯಪಟ್ಟು ಮೂರ್ಛೆ ಹೋದರು. ಕೇಶಿಯು ಕೃಷ್ಣನನ್ನು ಕೊಲ್ಲುವ ಉದ್ದೇಶದಿಂದ ಸಮೀಪಿಸಿದಾಗ, ಕೃಷ್ಣನು ಅವನ ಬಾಯಿಯನ್ನು ಹಿಡಿದು ಎರಡು ಭಾಗಗಳಾಗಿ ಸೀಳಿ ಕೊಂದನು. ಕೃಷ್ಣನು ಕೇಶಿಯನ್ನು ಕೊಂದ ಸುದ್ದಿಯನ್ನು ಕೇಳಿದ ನಂತರವೇ ನಾರದರಿಗೆ ಪ್ರಜ್ಞೆ ಮರಳಿತು.
ಅನೇಕ ಆಳ್ವಾರುಗಳು ಈ ಘಟನೆಯನ್ನು ಅನುಭವಿಸಿ ಹಾಡಿದ್ದಾರೆ:
ಪೊಯಗೈ ಆಳ್ವಾರ್ ತಮ್ಮ ಮುದಲ್ ತಿರುವಂದಾದಿಯಲ್ಲಿ “ಮಾವಾಯ್ ಪಿಳನ್ದು” (ಕುದುರೆಯ ಬಾಯಿಯನ್ನು ಸೀಳಿ) ಎಂದು ಕೊಂಡಾಡಿದ್ದಾರೆ.
ನಮ್ಮಾಳ್ವಾರ್ ತಮ್ಮ ತಿರುವಾಯ್ಮೊಳಿಯಲ್ಲಿ “ತುರಂಗಂ ವಾಯ್ ಪಿಳನ್ದಾನುರೈ ತೊಲೈವಿಲ್ಲಿಮಂಗಲಂ” (ಕುದುರೆಯ ಬಾಯಿಯನ್ನು ಸೀಳಿದವನು ನೆಲೆಸಿರುವ ಊರು ತೊಲೈವಿಲ್ಲಿಮಂಗಲಂ) ಎಂದು ಹೇಳಿದ್ದಾರೆ. ಕುಲಶೇಖರ ಆಳ್ವಾರ್ ತಮ್ಮ ಪೆರುಮಾಳ್ ತಿರುಮೊಳಿಯಲ್ಲಿ “ಮಾವಿನೈ ವಾಯ್ ಪಿಳನ್ದು ಉಗಂದ ಮಾಲೈ” (ಕುದುರೆಯ ಬಾಯಿಯನ್ನು ಸೀಳಿ ಸಂತೋಷಪಟ್ಟ ಮಾಧವ) ಎಂದು ಹೇಳಿದ್ದಾರೆ.
ಆಂಡಾಳ್ ತಮ್ಮ ತಿರುಪ್ಪಾವೈನಲ್ಲಿ “ಮಾವಾಯ್ ಪಿಳನ್ದಾನೈ” (ಕುದುರೆಯ ಬಾಯಿಯನ್ನು ಸೀಳಿದವನು) ಎಂದು ಹಾಡಿದ್ದಾರೆ.ತಿರುಮಂಗೈ ಆಳ್ವಾರ್ ತಿರುನೆಡುಂದಾಂಡಗಂನಲ್ಲಿ “ಮಾ ಕೀಂಡ ಕೈತ್ತಲತ್ತು ಎನ್ ಮೈಂದಾ” (ಕುದುರೆಯನ್ನು ಸೀಳಿದ ಸುಂದರವಾದ ಕೈಗಳನ್ನು ಹೊಂದಿರುವ ನನ್ನ ಯುವಕನೇ) ಎಂದು ವರ್ಣಿಸಿದ್ದಾರೆ.
ಗಮನಿಸಿ: ಈ ಪಾಶುರಗಳಲ್ಲಿ ‘ತುರಂಗಂ’ ಮತ್ತು ‘ಮಾ’ ಎಂಬ ಪದಗಳು ಕುದುರೆಯನ್ನು ಸೂಚಿಸುತ್ತವೆ.
ವ್ಯೋಮಾಸುರ ವಧೆ: ಮತ್ತೊಂದು ದಿನ, ಕಂಸನಿಂದ ಕಳುಹಿಸಲ್ಪಟ್ಟ ವ್ಯೋಮಾಸುರನು, ಕೃಷ್ಣನು ಆಡುತ್ತಿದ್ದಾಗ ಗೋಪ ಬಾಲಕನ ವೇಷದಲ್ಲಿ ಬಂದು ಅವರ ಗುಂಪನ್ನು ಸೇರಿದನು. ಅವನು ಬಾಲಕರನ್ನು ಒಬ್ಬೊಬ್ಬರಾಗಿ ಕರೆದುಕೊಂಡು ಹೋಗಿ ಬಚ್ಚಿಟ್ಟು, ಕೊನೆಯಲ್ಲಿ ಕೃಷ್ಣನನ್ನು ಕೊಲ್ಲಲು ಯೋಚಿಸಿದ್ದನು. ಇದನ್ನು ಅರಿತ ಕೃಷ್ಣನು, ಗೋಪಾಲಕನ ವೇಷದಲ್ಲಿದ್ದ ಆ ರಾಕ್ಷಸನನ್ನು ಕೊಂದನು.
ಹೀಗೆ ಶ್ರೀ ಗೋಕುಲ ಮತ್ತು ವೃಂದಾವನದಲ್ಲಿ ಕೃಷ್ಣನನ್ನು ಕೊಲ್ಲಲು ಬಂದ ಅನೇಕ ರಾಕ್ಷಸರು ಕೃಷ್ಣನಿಂದ ಹತರಾದರು.
ಈ ಘಟನೆಯ ಸಾರಂಶ:
- ಕೆಟ್ಟ ಮನಸ್ಸಿನ ಜನರು ಯಾವುದೇ ರೂಪ ಅಥವಾ ವೇಷದಲ್ಲಿ ಕೃಷ್ಣನನ್ನು ಸಮೀಪಿಸಿದರೂ, ಅವನು ಅವರನ್ನು ಸುಲಭವಾಗಿ ಗುರುತಿಸಿ ಸಂಹರಿಸುತ್ತಾನೆ.
- ಭಗವಂತನಿಗೆ ಎದುರಾಗುವ ಯಾವುದೇ ಅಪಾಯವು ನಿಜವಾಗಿಯೂ ಅವನಿಗೆ ಅಪಾಯವಲ್ಲ, ಏಕೆಂದರೆ ಯಾರೂ ಅವನಿಗೆ ಹಾನಿ ಮಾಡಲು ಸಾಧ್ಯವಿಲ್ಲ. ಆದರೆ ಆ ಅಪಾಯಗಳು ಅವನ ಭಕ್ತರಿಗೆ ಅಪಾಯಗಳಾಗಿ ತೋರುತ್ತವೆ. ಏಕೆಂದರೆ, ಭಗವಂತನಿಗೆ ಸಣ್ಣ ಅಪಾಯ ಬರುವುದನ್ನೂ ಭಕ್ತರು ಸಹಿಸಲಾರರು. ಆದ್ದರಿಂದ, ಭಗವಂತನು ತನಗೆ ಎದುರಾಗುವ ಇಂತಹ ಅಪಾಯಗಳನ್ನು ನಿವಾರಿಸುವ ಮೂಲಕ, ತನ್ನ ಭಕ್ತರ ದುಃಖವನ್ನು ಹೋಗಲಾಡಿಸುತ್ತಾನೆ.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/09/29/krishna-leela-23-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org