ಕೃಷ್ಣ ಲೀಲೆಗಳ ಸಾರಾಂಶ – 27 –ಮಥುರೆಯಲ್ಲಿ ಕೃಷ್ಣನ ನಿಗ್ರಹಾನುಗ್ರಹ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಅಕ್ರೂರನ ಯಾತ್ರೆ

ಕೃಷ್ಣ ಮತ್ತು ಬಲರಾಮರು ಅಕ್ರೂರನ ರಥದಲ್ಲಿ ಮಥುರೆಯನ್ನು ತಲುಪಿದರು. ಅವರು ಅಕ್ರೂರನನ್ನು ಅಲ್ಲಿಂದ ಕಳುಹಿಸಿ, ಮಥುರೆಯ ಬೀದಿಗಳಲ್ಲಿ ಸಂತೋಷದಿಂದ ವಿಹರಿಸತೊಡಗಿದರು. ಅಲ್ಲಿನ ದೊಡ್ಡ ದೊಡ್ಡ ಮಾಳಿಗೆಗಳಿಂದ, ನಗರದ ಸ್ತ್ರೀಯರು ಕೃಷ್ಣ ಮತ್ತು ಬಲರಾಮರನ್ನು ನೋಡಿ ಆನಂದಿಸಿದರು.

ಅವರು ಧನುರ್ಯಾಗಕ್ಕೆ ಹೋಗುತ್ತಿದ್ದುದರಿಂದ, ಕೃಷ್ಣನು ತನ್ನನ್ನು ಚೆನ್ನಾಗಿ ಅಲಂಕರಿಸಿಕೊಳ್ಳಲು ಬಯಸಿದನು. ಆ ಸಮಯದಲ್ಲಿ, ಕಂಸನ ವಸ್ತ್ರಗಳನ್ನು ಒಗೆಯುತ್ತಿದ್ದ ಅಗಸನೊಬ್ಬನು ಎದುರಿಗೆ ಬಂದನು. ಕೃಷ್ಣನು ಅವನ ಬಳಿಗೆ ಹೋಗಿ, “ದಯವಿಟ್ಟು ನಮಗೆ ಕೆಲವು ಒಳ್ಳೆ ವಸ್ತ್ರಗಳನ್ನು ಕೊಡು” ಎಂದು ಕೇಳಿದನು. ಭಗವಂತನ ಮಹಿಮೆಯನ್ನು ಅರಿಯದ ಅವನು ವಸ್ತ್ರಗಳನ್ನು ಕೊಡಲು ನಿರಾಕರಿಸಿದನು. ಅಷ್ಟೇ ಅಲ್ಲದೆ, ಅವನು ಕೃಷ್ಣ ಮತ್ತು ಬಲರಾಮರನ್ನು ಅವಮಾನಿಸಿ ನಿಂದಿಸಿದನು. ಕೃಷ್ಣನಿಗೆ ಕೋಪ ಬಂದು, ತನ್ನ ಬೆರಳ ತುದಿಯಿಂದಲೇ ಅವನ ತಲೆಯನ್ನು ಕತ್ತರಿಸಿದನು. ಅಗಸನಲ್ಲಿದ್ದ ಮೂಟೆಯಿಂದ ವಸ್ತ್ರಗಳನ್ನು ತೆಗೆದುಕೊಂಡು, ಕೃಷ್ಣ ಮತ್ತು ಬಲರಾಮರಿಬ್ಬರೂ ಆ ವಸ್ತ್ರಗಳನ್ನು ಧರಿಸಿದರು.

ಈ ಘಟನೆಯನ್ನು ನಂಪಿಳ್ಳೈ ಅವರು, ನಮ್ಮಾಳ್ವಾರ್ ಅವರ “ನಿನ್ಱವಾಱುಮ್ ಇರುಂದವಾಱುಮ್” ಪಾಶುರದ ವ್ಯಾಖ್ಯಾನದಲ್ಲಿ ಸುಂದರವಾಗಿ ವಿವರಿಸಿದ್ದಾರೆ. ಒಮ್ಮೆ ಅಗಸನೊಬ್ಬ ಪೆರಿಯ ಪೆರುಮಾಳ್ (ಶ್ರೀ ರಂಗನಾಥ) ಅವರ ಬಟ್ಟೆಗಳನ್ನು ಅತ್ಯಂತ ಶುದ್ಧವಾಗಿ ಒಗೆದಾಗ, ಭಗವದ್ ರಾಮಾನುಜರು ಹಿಂದೆ ಕೃಷ್ಣಾವತಾರದಲ್ಲಿ ಕೃಷ್ಣನಿಗೆ ಅಪರಾಧ ಮಾಡಿದ ಆ ಹಳೆಯ ಅಗಸನನ್ನು ಕ್ಷಮಿಸುವಂತೆ ಪೆರಿಯ ಪೆರುಮಾಳ್ ಅವರಲ್ಲಿ ಪ್ರಾರ್ಥಿಸಿದರು. ಪೆರಿಯ ಪೆರುಮಾಳ್ ರಾಮಾನುಜರ ಮಾತನ್ನು ಮನ್ನಿಸಿದನು.

ನಂತರ, ಕೃಷ್ಣನು ಸುಂದರವಾದ ಹೂಮಾಲೆಗಳನ್ನು ಧರಿಸಲು ಬಯಸಿದನು. ಅವನು ಸುದಾಮ ಎಂಬ ಮಾಲಾಕಾರನನ್ನು (ಹೂವಾಡಿಗ) ಹುಡುಕಿಕೊಂಡು ಅವನ ಸಣ್ಣ ಗುಡಿಸಲಿಗೆ ಹೋದನು. ಕೃಷ್ಣ ಮತ್ತು ಬಲರಾಮರನ್ನು ಕಂಡು ಮಾಲಾಕಾರನಿಗೆ ಪರಮಾನಂದವಾಯಿತು. ಅವನು ಅವರನ್ನು ಚೆನ್ನಾಗಿ ಸತ್ಕರಿಸಿ, ತಾನು ತಯಾರಿಸಿದ ಶ್ರೇಷ್ಠವಾದ ಹೂಮಾಲೆಗಳನ್ನು ಸಮರ್ಪಿಸಿದನು. ಭಗವಂತನು ಬಹಳ ಪ್ರಸನ್ನನಾಗಿ ಅವನಿಗೆ ಅನುಗ್ರಹಿಸಿದನು. ನಂತರ ಅವರು ಅಲ್ಲಿಂದ ಹೊರಟರು.

ಈ ಘಟನೆಯನ್ನು ಪೆರಿಯವಾಚ್ಚಾನ್ ಪಿಳ್ಳೈ ಅವರು ನಾಚ್ಚಿಯಾರ್ ತಿರುಮೊಳಿಯ “ಮಾಡ ಮಾಳಿಗೈ  ಸೂೞ್ ಮದುರೈ ಪ್ಪದಿ ನಾಡಿ ನಂದೆರುವಿನ್ ನಡುವೇ ವಂದಿಟ್ಟು” (ಮಾಳಿಗೆಗಳಿಂದ ಆವೃತವಾದ ಮಥುರೆಯಲ್ಲಿ ಕೃಷ್ಣನು ಹುಡುಕಿಕೊಂಡು ನಮ್ಮ ಬೀದಿಯ ನಡುವೆ ಬಂದನು) ಎಂಬ ಪಾಶುರದ ವ್ಯಾಖ್ಯಾನದಲ್ಲಿ ವಿವರಿಸಿದ್ದಾರೆ. ಹಾಗೆಯೇ, ವಾದಿ ಕೇಸರಿ ಅಳಗಿಯ ಮಣವಾಳ ಜೀಯರ್ ಅವರು ತಿರುವಾಯ್ಮೊಳಿಯ “ಪೂಸುಮ್ ಸಾಂದು” ಪಾಶುರದ ವ್ಯಾಖ್ಯಾನದಲ್ಲಿ ಈ ಘಟನೆಯನ್ನು ಎತ್ತಿ ತೋರಿಸಿದ್ದಾರೆ.

ನಂತರ, ಭಗವಂತನು ಉತ್ತಮವಾದ ಶ್ರೀಗಂಧದ ಲೇಪನವನ್ನು ಹಚ್ಚಿಕೊಳ್ಳಲು ಬಯಸಿದನು. ಆ ಸಮಯದಲ್ಲಿ ಕಂಸನಿಗೆ ಗಂಧವನ್ನು ಪೂರೈಸುತ್ತಿದ್ದ  ತ್ರಿವಕ್ರ  ಎಂಬ ಗೂನುಬೆನ್ನಿನ ಮಹಿಳೆ  ವಿವಿಧ ಬಗೆಯ ಗಂಧಗಳೊಂದಿಗೆ ಎದುರಾದಳು. ಕೃಷ್ಣನು ಅವಳಲ್ಲಿ ಸ್ವಲ್ಪ ಗಂಧವನ್ನು ಕೇಳಿದನು. ಅವಳು ಮೊದಲು ಸಾಧಾರಣ ಗುಣಮಟ್ಟದ ಗಂಧವನ್ನು ಕೊಟ್ಟಳು. ಕೃಷ್ಣನು ಅದನ್ನು  ಸ್ವೀಕರಿಸಲು ನಿರಾಕರಿಸಿ ಉತ್ತಮವಾದುದನ್ನು ಕೇಳಿದನು. ಅವಳು ಅದಕ್ಕಿಂತ ಸ್ವಲ್ಪ ಉತ್ತಮವಾದುದನ್ನು ಕೊಟ್ಟಳು. ಕೃಷ್ಣನು ತಾನು ಶ್ರೇಷ್ಠವಾದದ್ದನ್ನೇ ಬಯಸುವುದಾಗಿ ಕೇಳಿದನು. ಗಂಧದ ಗುಣಮಟ್ಟವನ್ನು ಗುರುತಿಸುವ ಕೃಷ್ಣನ ಸಾಮರ್ಥ್ಯಕ್ಕೆ ಬೆರಗಾಗಿ, ಅವಳು ಅತ್ಯುನ್ನತ ಗುಣಮಟ್ಟದ ಗಂಧವನ್ನು ನೀಡಿದಳು. ಅವಳು ಅದನ್ನು ಅವನ ದಿವ್ಯ ದೇಹಕ್ಕೆ ಲೇಪಿಸಿದಳು ಮತ್ತು ಅವನು ಪ್ರಸನ್ನನಾದನು. ಅವನು ಅವಳನ್ನು ಹರಸಲು ನಿರ್ಧರಿಸಿದನು. ಅವನು ತನ್ನ ದಿವ್ಯ ಪಾದದಿಂದ ಅವಳ ಕಾಲಿನ ಬೆರಳನ್ನು ಒತ್ತಿ, ತನ್ನ ದಿವ್ಯ ಹಸ್ತದಿಂದ ಅವಳ ಗಲ್ಲವನ್ನು ಮೇಲಕ್ಕೆತ್ತಿದನು. ಅವಳ ಗೂನು ಮಾಯವಾಯಿತು ಮತ್ತು ಅವಳು ತೇಜಸ್ವಿಯಾದಳು.

ಈ ಘಟನೆಯನ್ನು ಪೆರಿಯಾಳ್ವಾರ್ ತಮ್ಮ ಪೆರಿಯಾಳ್ವಾರ್ ತಿರುಮೊಳಿಯ ಪಾಶುರದಲ್ಲಿ ವಿಶೇಷವಾಗಿ ಉಲ್ಲೇಖಿಸಿದ್ದಾರೆ: “ನಾಱಿಯ ಸಾಂದಮ್ ನಮಕ್ಕಿರೈ ನಲ್ಗು ಎನ್ನ ತೇಱಿ ಅವಳುಮ್ ತಿರುವುಡಂಬಿಲ್ ಪೂಸ ಊಱಿಯ ಕೂನಿನೈ ಉಳ್ಳೇ ಒಡುಂಗ ಅನ್ಱು ಏಱ ಉರುವಿನಾಯ್! ಅಚ್ಚೋ ಅಚ್ಚೋ ಎಂಬೆರುಮಾನ್! ವಾರಾ ಅಚ್ಚೋ ಅಚ್ಚೋ” (ನೀನು “ಸ್ವಲ್ಪ ಸುವಾಸಿತ ಗಂಧವನ್ನು ಕೊಡು” ಎಂದು ಕೇಳಿದೆ. ನಿನ್ನ ಮಹಿಮೆಯನ್ನು ಅರಿತು ತ್ರಿವಕ್ರ  ನಿನಗೆ ಗಂಧವನ್ನು ಲೇಪಿಸಿದಳು. ನೀನು ಅವಳ ಗೂನನ್ನು ನಿವಾರಿಸಿದೆ. ನನ್ನ ಒಡೆಯನೇ, ನೀನು ಏಕೆ ಬರ ಬಾರದು?).

ಈ ರೀತಿಯಾಗಿ, ಭಗವಂತನು ಅಗಸನ ಮೇಲೆ ತನ್ನ ಕೋಪವನ್ನು ತೋರಿದರೆ, ಮಾಲಾಕಾರ ಮತ್ತು ತ್ರಿವಕ್ರೆಯ ಮೇಲೆ ತನ್ನ ಅನುಗ್ರಹವನ್ನು ಸುರಿಸಿದನು.

ಈ ಲೀಲೆಯ ಸಾರಾಂಶ:

  • ಒಬ್ಬ ವ್ಯಕ್ತಿಯು ಭಗವಂತನಲ್ಲಿ ಪ್ರೀತಿ/ಭಕ್ತಿಯನ್ನು ಹೊಂದಿದ್ದರೆ, ಅವನು ಭಗವಂತನ ಅನುಗ್ರಹವನ್ನು ಪಡೆಯಬಹುದು. ಅದೇ ಒಬ್ಬನು ಅವನನ್ನು ವಿರೋಧಿಸಿದರೆ, ಅವನು ಭಗವಂತನ ಆಗ್ರಹಕ್ಕೆ ಗುರಿಯಾಗುತ್ತಾನೆ. ಈ ರೀತಿಯಾಗಿ, ಪ್ರತಿಯೊಬ್ಬ ವ್ಯಕ್ತಿಗೂ ತಕ್ಕ ಫಲವನ್ನು ನೀಡುವ ಮೂಲಕ, ಅವನು ತನ್ನ “ಸಮಾನತೆ” ಎಂಬ ಗುಣವನ್ನು ಪ್ರಕಟಿಸುತ್ತಾನೆ.
  • ಒಬ್ಬನು ಭಗವಂತನ ಕಡೆಗೆ ಸ್ವಲ್ಪ ಪ್ರೀತಿಯನ್ನು ತೋರಿಸಿದರೂ ಸಾಕು, ಭಗವಂತನು ಅದಕ್ಕಾಗಿ ದೊಡ್ಡ ಅನುಗ್ರಹವನ್ನೇ ಸುರಿಸುತ್ತಾನೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/03/krishna-leela-27-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment