ಕೃಷ್ಣ ಲೀಲೆಗಳ ಸಾರಾಂಶ – 17 – ವೇಣುಗೋಪಾಲನ ವೇಣುಗಾನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಕೃಷ್ಣನು ಗೋಪಾಲಕನಾಗಿ ಆಡಿದ ಲೀಲೆ

ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ಲೀಲೆಗಳಲ್ಲಿ ವೇಣುಗಾನವೂ ಒಂದು. ಕೃಷ್ಣನನ್ನು ನೆನೆಸಿಕೊಂಡಾಗಲೆಲ್ಲಾ ಕೊಳಲಿನ ನೆನಪಾಗಲಿ ಎಂಬಂತೆ, ಅವನು ಯಾವಾಗಲೂ ತನ್ನ ಕೈಯಲ್ಲಿ ಅಥವಾ ಸೊಂಟದಲ್ಲಿ ಕೊಳಲನ್ನು ಇಟ್ಟುಕೊಂಡಿರುತ್ತಿದ್ದನು. ಸಾಮಾನ್ಯವಾಗಿ, ಗೋಪಾಲಕರು (ಗೊಲ್ಲರು) ತಮ್ಮೊಂದಿಗೆ ಕೊಳಲನ್ನು ಕೊಂಡೊಯ್ಯುತ್ತಿದ್ದರು.

ಕೃಷ್ಣನು ಕೊಳಲನ್ನು ಊದುವ ಮೂಲಕ ಎರಡು ಕಾರ್ಯಗಳನ್ನು ಸಾಧಿಸುತ್ತಿದ್ದನು: ೧.ಮೊದಲನೆಯದಾಗಿ, ಹಸುಗಳನ್ನು ಮೇಯಿಸುವಾಗ, ತನ್ನಿಂದ ದಾರಿ ತಪ್ಪಿ ಹೋದ ಹಸುಗಳು ಮತ್ತು ಕರುಗಳನ್ನು ಹಿಂತಿರುಗಿ ಕರೆತರಲು ಅವನು ಕೊಳಲನ್ನು ಊದುತ್ತಿದ್ದನು. ೨.ಎರಡನೆಯದಾಗಿ, ಅವನು ತನ್ನ ಕೊಳಲಿನ ನಾದದಿಂದ ಬೃಂದಾವನದ ಗೋಪಿಕೆಯರನ್ನು ತನ್ನತ್ತ ಸೆಳೆಯುತ್ತಿದ್ದನು.

ಆಳ್ವಾರರ ಅನುಭವದಲ್ಲಿ ವೇಣುಗಾನ: ಪೆರಿಯಾಳ್ವಾರರು ತಮ್ಮ ‘ಪೆರಿಯಾಳ್ವಾರ್ ತಿರುಮೊಳಿ’ಯ ಸುಂದರವಾದ “ನಾವಲಂ ಪೆರಿಯ ತೀವು” ಎಂಬ ದಶಕದಲ್ಲಿ (ಪದಗಳಲ್ಲಿ), ಕೃಷ್ಣನ ಕೊಳಲ ನಾದವನ್ನು  ಅತ್ಯಂತ ಮನೋಹರವಾಗಿ ವರ್ಣಿಸಿದ್ದಾರೆ. ಅವರು ಈ ದೃಶ್ಯವನ್ನು ನಮ್ಮ ಕಣ್ಣಮುಂದೆ ತಂದು ನಿಲ್ಲಿಸುತ್ತಾರೆ: ಕೃಷ್ಣನು ಕೊಳಲು ಊದುವ ರೀತಿ, ಅವನು ತನ್ನ ಹೆಗಲನ್ನು ಸ್ವಲ್ಪ ಕೆಳಕ್ಕೆ ಬಾಗಿಸುವ ಬಗೆ, ಆ ನಾದವನ್ನು ಕೇಳಿ ಗೋಪಿಕೆಯರು ತಮ್ಮ ಎಲ್ಲಾ ಅಡೆತಡೆಗಳನ್ನು ಮುರಿದು ಅವನನ್ನು ತಲುಪುವುದು, ರಂಭೆಯಂತಹ ದೇವಲೋಕದ ಅಪ್ಸರೆಯರು ಮೈಮರೆತು ತಮ್ಮ ನೃತ್ಯವನ್ನು ನಿಲ್ಲಿಸಿದ್ದು, ನಾರದ ಮುಂತಾದವರು ತಮ್ಮ ವಾದ್ಯಗಳನ್ನು ನುಡಿಸುವುದನ್ನು ಮರೆತು ಆ ನಾದವನ್ನು ಆಲಿಸಿದ್ದು, ಪಕ್ಷಿಗಳ ಹಿಂಡು ಆ ನಾದವನ್ನು ಕೇಳಿ ಸ್ತಬ್ಧವಾಗಿದ್ದು, ಜಿಂಕೆ, ಹಸು ಮುಂತಾದ ಪ್ರಾಣಿಗಳು ತಮ್ಮ ಆಹಾರವನ್ನು ಮರೆತು ಆ ನಾದವನ್ನು ಕೇಳುತ್ತಾ ಕುಳಿತಿದ್ದು, ಮರಗಳಿಂದ ಜೇನುತುಪ್ಪ ಹರಿಯಲಾರಂಭಿಸಿದ್ದು ಮತ್ತು ಮರದ ಕೊಂಬೆಗಳು ಬಾಗಿದ್ದು – ಇವೆಲ್ಲವನ್ನೂ ಅವರು ಅದ್ಭುತವಾಗಿ ವಿವರಿಸಿದ್ದಾರೆ.

ಇತರ ಆಳ್ವಾರರು ಕೂಡ ಇದನ್ನು ವರ್ಣಿಸಿದ್ದಾರೆ:

ಕುಲಶೇಖರಾಳ್ವಾರರು ತಮ್ಮ ‘ಪೆರುಮಾಳ್ ತಿರುಮೊಳಿ’ಯಲ್ಲಿ “ಕುಳೈಂದು ಕುಳಲ್ ಇನಿದು ಊದಿ ವಂದಾಯ್” (ನೀನು ವಿನಮ್ರನಾಗಿ, ಸುಂದರವಾಗಿ ಕೊಳಲನ್ನು ಊದುತ್ತಾ ಬಂದೆ) ಎಂದು ಹೇಳುತ್ತಾರೆ.

ಪೇಯಾಳ್ವಾರರು ತಮ್ಮ ‘ಮೂನ್ರಾಮ್ ತಿರುವಂದಾದಿ’ಯಲ್ಲಿ “ಕೋವಲನಾಯ್ ಆನಿರೈಗಳ್ ಮೇಯ್ತ್ತುಕ್ ಕುಳಲೂದಿ” (ಗೋಪಾಲಕನಾಗಿ, ಕೃಷ್ಣನು ಹಸುಗಳನ್ನು ಮೇಯಿಸುತ್ತಾ ಕೊಳಲನ್ನು ಊದಿದನು) ಎಂದು ಹೇಳುತ್ತಾರೆ.

ನಮ್ಮಾಳ್ವಾರರು ‘ತಿರುವಾಯ್ಮೊಳಿ’ಯಲ್ಲಿ “ಕೇಯತ್ ತೀಂಗುಳಲ್ ಊದಿಟ್ರುಂ” (ಕೊಳಲಿನಲ್ಲಿ ಮಧುರವಾದ ಸಂಗೀತವನ್ನು ನುಡಿಸುವುದು) ಎಂದು ಹೇಳುತ್ತಾರೆ.

ಈ ರೀತಿಯಾಗಿ, ಇತರ ಆಳ್ವಾರರೂ ಸಹ ಕೃಷ್ಣನ  ಕೊಳಲ ನಾದವನ್ನು  ಕೊಂಡಾಡಿದ್ದಾರೆ.

ಈ ಲೀಲೆಯ ಸಾರಾಂಶ:

  • ಕೃಷ್ಣನ ನೇರ ಮಾತುಗಳಿಗಿಂತಲೂ, ಅವನ ವೇಣುಗಾನವೇ ಹೆಚ್ಚು ಮಹಿಮಾನ್ವಿತವಾಗಿದೆ ಎಂದು ಇಲ್ಲಿ ತೋರಿಸಲಾಗಿದೆ. ಇಲ್ಲಿ, ಕೊಳಲನ್ನು ‘ಆಚಾರ್ಯರ’ ಸ್ಥಾನದಲ್ಲಿ ಹೋಲಿಸಲಾಗಿದೆ. ಅಂದರೆ, ಆಚಾರ್ಯರ ಮೂಲಕ ಭಗವಂತನನ್ನು ಕೇಳುವುದು ಮತ್ತು ಅನುಭವಿಸುವುದು ಅತ್ಯಂತ ಶ್ರೇಷ್ಠ ಎಂಬುದು ಇದರ ಅರ್ಥ.
  • ಭಗವಂತನು ತನ್ನ ಕರುಣೆಯನ್ನು ತೋರಿದರೆ, ಜ್ಞಾನಿಗಳೇ ಆಗಲಿ, ಅಜ್ಞಾನಿಗಳೇ ಆಗಲಿ, ಪಕ್ಷಿಗಳು, ಪ್ರಾಣಿಗಳು, ಮರಗಳೇ ಆಗಲಿ, ಯಾವುದೇ ಭೇದವಿಲ್ಲದೆ ಎಲ್ಲರೂ ಭಗವದನುಭವದಲ್ಲಿ ಕರಗಿ ಹೋಗುತ್ತಾರೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/09/22/krishna-leela-17-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment