ಕೃಷ್ಣ ಲೀಲೆಗಳ ಸಾರಾಂಶ – 54 – ಸಹಸ್ರನಾಮ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಮಹಾಭಾರತ ಯುದ್ಧ – ಭಾಗ ೧

ಮಹಾಭಾರತದಲ್ಲಿ, ಕೃಷ್ಣನಿಂದ ಉಪದೇಶಿಸಲ್ಪಟ್ಟ ಶ್ರೀಗೀತೆ ಹೇಗೆ ಪ್ರಮುಖವೋ, ಹಾಗೆಯೇ ಕೃಷ್ಣನ ಮಹಿಮೆಯನ್ನು ಸಾರುವ ಶ್ರೀ ಸಹಸ್ರನಾಮವೂ ಒಂದು ಪ್ರಮುಖ ಭಾಗವಾಗಿದೆ. ನಾವೀಗ ಅದರ ಬಗ್ಗೆ ಆನಂದಿಸೋಣ.

ಕೃಷ್ಣನ ಆಜ್ಞೆಯಂತೆ, ಅರ್ಜುನನು ಭೀಷ್ಮರನ್ನು ಶರಶಯ್ಕೆಯಲ್ಲಿ (ಬಾಣಗಳ ಹಾಸಿಗೆಯ ಮೇಲೆ) ಮಲಗಿಸಿದ ನಂತರ, ಅತ್ಯಂತ ದುಃಖಿತನಾದನು. ಭಗವಂತನಲ್ಲಿ ಅತೀವ ಭಕ್ತಿಯುಳ್ಳ, ಸದ್ಗುಣ ಸಂಪನ್ನರಾದ, ಕುಲವೃದ್ಧರಾದ ಮತ್ತು ಪಿತಾಮಹರಾದ ಭೀಷ್ಮರನ್ನು ಸೋಲಿಸಿದೆವಲ್ಲಾ ಎಂದು ಪಾಂಡವರು ವಿಷಾದಿಸಿದರು. ಯುದ್ಧದಲ್ಲಿ ಇಂತಹ ಘಟನೆಗಳು ಸಹಜ ಎಂದು ಹೇಳಿ ಕೃಷ್ಣನು ಅವರನ್ನು ಸಮಾಧಾನಪಡಿಸಿದನು.

ತದನಂತರ, ಅಂದು ರಾತ್ರಿ ಕೃಷ್ಣನು ಯುಧಿಷ್ಠಿರ ಮತ್ತು ಅವನ ಸಹೋದರರನ್ನು ಕರೆದು, “ನೀವು ಭೀಷ್ಮರ ಬಳಿಗೆ ಹೋಗಿ ಅತ್ಯುನ್ನತ ತತ್ವಗಳನ್ನು (ಧರ್ಮಸೂಕ್ಷ್ಮಗಳನ್ನು) ಕಲಿತುಕೊಳ್ಳಿರಿ” ಎಂದು ಹೇಳಿದನು. ಅವರು ಕೃಷ್ಣನನ್ನು ಜೊತೆಯಲ್ಲಿ ಕರೆದುಕೊಂಡು ಭೀಷ್ಮರ ಬಳಿಗೆ ಹೋದರು.

ಅವರು ಭೀಷ್ಮರನ್ನು ಪೂಜಿಸಿ, “ಪರಮಾತ್ಮ ಯಾರು? ಅಂತಿಮ ಗುರಿ ಯಾವುದು? ಅದನ್ನು ಪಡೆಯಲು ಉಪಾಯ (ಮಾರ್ಗ) ಯಾವುದು?” ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಪ್ರಾರ್ಥಿಸಿದರು. ಆ ಸಮಯದಲ್ಲಿ, ಭೀಷ್ಮರು ದೇವಕೀ ಪುತ್ರನಾದ ಕೃಷ್ಣನ ಕಡೆಗೆ ತೋರಿಸುತ್ತಾ, “ಕೃಷ್ಣನೇ ಪರಮಾತ್ಮ. ಅವನಿಗೆ ಕೈಂಕರ್ಯ ಮಾಡುವುದೇ ಪರಮ ಪುರುಷಾರ್ಥ (ಅಂತಿಮ ಗುರಿ). ಅವನ ಸಾವಿರ ದಿವ್ಯ ನಾಮಗಳನ್ನು ಪಠಿಸುವುದು ಮತ್ತು ಜಪ ಮಾಡುವುದೇ ಶ್ರೇಷ್ಠವಾದ ಮಾರ್ಗ” ಎಂದು ಹೇಳಿದರು. ಮುಂದುವರೆದು, ಅವರು ಸಹಸ್ರನಾಮಗಳನ್ನು ವಿವರಿಸಿ ಕೃಷ್ಣನಿಗೆ ಆನಂದವನ್ನು ಉಂಟುಮಾಡಿದರು. ಪಾಂಡವರು ಕೃಷ್ಣನ ಮಹಿಮೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡರು.

ಆಳ್ವಾರುಗಳು ಸಹಸ್ರನಾಮದ ಮಹಿಮೆಯನ್ನು ಅನೇಕ ಕಡೆಗಳಲ್ಲಿ ತೋರಿಸಿಕೊಟ್ಟಿದ್ದಾರೆ:

ಪೆರಿಯಾಳ್ವಾರ್ ತಮ್ಮ ‘ತಿರುಪ್ಪಲ್ಲಾಂಡು’ವಿನಲ್ಲಿ ಹೀಗೆ ಹೇಳುತ್ತಾರೆ: “ತೊಂಡಕ್ಕುಲತ್ತಿಲುಳ್ಳೀರ್ ವಂದು ಅಡಿ ತೊಳುದು  ಆಯಿರ ನಾಮಂ ಸೊಲ್ಲಿ” (ದಾಸ್ಯ ಕುಲದಲ್ಲಿರುವವರೇ (ಎಂಬೆರುಮಾನಿನ ಭಕ್ತರೇ)! ನಮ್ಮ ಗೋಷ್ಠಿಗೆ ಬಂದು, ಆ ಅಚ್ಯುತನ ಪಾದಾರವಿಂದಗಳನ್ನು ವಂದಿಸಿ, ಅವನ ಸಾವಿರ ನಾಮಗಳನ್ನು ಸಂಕೀರ್ತನೆ ಮಾಡಿ…).

ಆಂಡಾಳ್ ತಮ್ಮ ‘ನಾಚ್ಚಿಯಾರ್ ತಿರುಮೊಳಿ’ಯಲ್ಲಿ “ನಾಮಂ ಆಯಿರಂ ಏತ್ತ ನಿನ್ಱ ನಾರಾಯಣಾ!” (ಸಾವಿರ ದಿವ್ಯ ನಾಮಗಳಿಂದ ಸ್ತುತಿಸಲ್ಪಡುವ ನಾರಾಯಣನೇ!) ಎಂದು ಹಾಡಿದ್ದಾರೆ.

ನಮ್ಮಾಳ್ವಾರ್ ತಮ್ಮ ‘ತಿರುವಾಯ್ಮೊಳಿ’ಯಲ್ಲಿ “ಓರಾಯಿರಮಾಯ್ ಉಲಗೇೞಳಿಕ್ಕುಂ ಪೇರ್ ಆಯಿರಂ ಕೊಂಡದೋರ್ ಪೀಡುಡೈಯನ್” (ಎಂಬೆರುಮಾನ್ ಸಾವಿರ ವಿಶಿಷ್ಟ ದಿವ್ಯ ನಾಮಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರತಿಯೊಂದೂ ಸಮಸ್ತ ಚೇತನಾಚೇತನಗಳನ್ನು ಸಾವಿರ ಬಗೆಯಲ್ಲಿ ರಕ್ಷಿಸುತ್ತವೆ) ಎಂದು ಹೇಳಿದ್ದಾರೆ.

ತಿರುಮಂಗೈ ಆಳ್ವಾರ್ ತಮ್ಮ ‘ಪೆರಿಯ ತಿರುಮೊಳಿ’ಯಲ್ಲಿ “ಪಳ್ಳಿಯಿಲ್ ಓದಿ ವಂದ ತನ್ ಸಿಱುವನ್ ವಾಯಿಲ್ ಓರಾಯಿರ ನಾಮಂ” (ಹಿರಣ್ಯಾಸುರನ ಮಗನಾದ ಪ್ರಹ್ಲಾದಾಳ್ವಾನ್, ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿ ತಂದೆಯ ಬಳಿಗೆ ಬರುವಾಗ, ತನ್ನ ದಿವ್ಯವಾದ ಬಾಯಿಯಲ್ಲಿ ಸರ್ವೇಶ್ವರನ ಸಾವಿರ ನಾಮಗಳನ್ನು ಪಠಿಸುತ್ತಿದ್ದನು) ಎಂದು ಹೇಳಿದ್ದಾರೆ.

ಶ್ರೀ ಪರಾಶರ ಭಟ್ಟರು ಸಹಸ್ರನಾಮಕ್ಕೆ ವಿಸ್ತಾರವಾದ ವ್ಯಾಖ್ಯಾನವನ್ನು ಬರೆದಿದ್ದಾರೆ.

ಈ ಲೀಲೆಯ ಸಾರಾಂಶ:

  • ‘ವಿಷ್ಣು ಸಹಸ್ರನಾಮ’ ಎಂದು ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆಯಿಲ್ಲ. ಕೇವಲ ‘ಸಹಸ್ರನಾಮ’ ಎಂದು ಹೇಳಿದರೆ, ಅದು ವಿಷ್ಣು ಸಹಸ್ರನಾಮವನ್ನೇ ಸೂಚಿಸುತ್ತದೆ.
  • ಈ ಕಲಿಯುಗದಲ್ಲಿ, ತಿರುನಾಮ ಸಂಕೀರ್ತನೆಯು (ಭಗವಂತನ ನಾಮಗಳನ್ನು ಹಾಡುವುದು) ಭಗವಂತನನ್ನು ತಲುಪಲು ಉತ್ತಮ ಮಾರ್ಗವೆಂದು ಹೇಳಲ್ಪಟ್ಟಿದ್ದರೂ, ಶ್ರೀವೈಷ್ಣವರು ಅದನ್ನು ‘ಉಪಾಯ’ (ಮಾರ್ಗ) ಎಂದು ಭಾವಿಸಿ ಮಾಡುವುದಿಲ್ಲ. ಅದನ್ನು ಕೇವಲ ‘ಕೈಂಕರ್ಯ’ (ಸೇವೆ) ಎಂದು ಭಾವಿಸಿ ಮಾಡುತ್ತಾರೆ.
  • ಜೀವಾತ್ಮನ ನಿಜ ಸ್ವರೂಪಕ್ಕೆ ಅನುಗುಣವಾಗಿ ಭಗವಂತನೊಬ್ಬನೇ ಸರಿಯಾದ ‘ಉಪಾಯ’ ಆಗಿರುವುದರಿಂದ, ಬೇರೆ ಯಾವುದನ್ನೂ ಉಪಾಯವಾಗಿ ಸ್ವೀಕರಿಸುವುದಿಲ್ಲ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/30/krishna-leela-54-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment