ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಜೀಯರ್ ಅವರ ಅಂತ್ಯಕ್ರಿಯೆಗಳು
ನಂತರ, ಜೀಯರ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು, ಅವರ ಹಿಂದಿನ ಗೃಹಸ್ಥಾಶ್ರಮದ ಕಾಲದ ಮೊಮ್ಮಗನಾದ ಜೀಯರ್ ನಾಯನಾರ್ ಅವರು ಎಲ್ಲಾ ಶಿಷ್ಯರನ್ನು ಪವಿತ್ರ ಕಾವೇರಿ ನದಿಗೆ ಕರೆದೊಯ್ದರು; ಅಲ್ಲಿ ಎಲ್ಲರೂ ಸ್ನಾನ ಮಾಡಿದರು. ಬಳಿಕ, ಜೀಯರ್ ಅವರಿಗೆ ‘ತಿರುಮಂಜನ’ (ಪವಿತ್ರ ಸ್ನಾನ) ನೆರವೇರಿಸುವುದಕ್ಕಾಗಿ ಅವರು ನದಿಯಿಂದ ನೀರನ್ನು ತಂದರು.ಅವರು ಜೀಯರ್ ದಿವ್ಯ ಹಾಗೂ ದೋಷರಹಿತವಾದ ರೂಪವನ್ನು ‘ತಿರುಮಂಜನವೇದಿ’ಯ (ವಿವಿಧ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಬಳಸುವ ಎತ್ತರದ ವೇದಿಕೆ) ಮೇಲೆ ಪ್ರತಿಷ್ಠಾಪಿಸಿ, ಪುರುಷಸೂಕ್ತ, ದ್ವಯ ಮಹಾಮಂತ್ರ ಮತ್ತು ಇತರ ಶ್ಲೋಕಗಳ ಪಠಣದೊಂದಿಗೆ ತಿರುಮಂಜನವನ್ನು ನೆರವೇರಿಸಿದರು. ಬಳಿಕ ದಿವ್ಯ ವಸ್ತ್ರದಿಂದ ಹೆಚ್ಚುವರಿ ನೀರನ್ನು ಒರೆಸಿ, “ವಿಸ್ತೀರ್ಣಬಾಲತಲ ವಿಸ್ಪುರದೂರ್ಧ್ವಪುಂಡ್ರಮ್” (ಅವರ ವಿಶಾಲವಾದ ಹಣೆಯ ಮೇಲೆ ಹೊಳೆಯುವ ತಿರುಮಣ್ ಕಾಪ್ಪು) ಎಂಬ ಶ್ಲೋಕದಲ್ಲಿ ವರ್ಣಿಸಿರುವಂತೆಯೇ ಹನ್ನೆರಡು ‘ಊರ್ಧ್ವಪುಂಡ್ರ’ಗಳನ್ನು (ಶರೀರದ ಹನ್ನೆರಡು ವಿವಿಧ ಭಾಗಗಳಲ್ಲಿ ಧರಿಸುವ ದಿವ್ಯ ಚಿಹ್ನೆಗಳು) ಜೀಯರಿಗೆ ಧರಿಸಿದರು. ಅವರು ತಿರುಮಣ್ಕಾಪ್ಪು ಮತ್ತು ಶ್ರೀಚೂರ್ಣದ (ಬಿಳಿ ಮತ್ತು ಕೆಂಪು ಬಣ್ಣದ ಪುಡಿಗಳು) ಉಳಿದ ಭಾಗವನ್ನು, ಕಷ್ಟದ ಕಾಲಕ್ಕೆ ಆಸರೆಯಾಗುವ ಸಂಪತ್ತಿನಂತೆ ತಮ್ಮಲ್ಲಿ ಹಂಚಿಕೊಂಡರು.ನಂತರ ಅವರು ಕರುಣೆಯಿಂದ ಜೀಯರ್ ಅವರ ದಿವ್ಯ ಸ್ವರೂಪವನ್ನು ದಿವ್ಯ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ, ತಮ್ಮ ರಕ್ಷಣೆಗಾಗಿ ತಮ್ಮ ತಲೆ ಮತ್ತು ಎದೆಯನ್ನು ಅವರ ದಿವ್ಯ ಪಾದಗಳ ಮೇಲೆ ಇರಿಸಿದರು. ಮಂಗಳಕರವಾದ ಆಶ್ರಯವೆಂದು ಪರಿಗಣಿಸಲ್ಪಟ್ಟ ಜೀಯರ್ ಅವರ ದಿವ್ಯ ಸ್ವರೂಪವನ್ನು ತಮ್ಮ ಮನಸ್ಸಿನಲ್ಲಿ ನೆಲೆಗೊಳಿಸಿಕೊಂಡು, ಕಣ್ಣುಗಳನ್ನು ಮುಚ್ಚದೆ ಆ ದಿವ್ಯ ರೂಪವನ್ನು ವೀಕ್ಷಿಸುತ್ತಾ ಪ್ರತಿ ಕ್ಷಣವನ್ನೂ ಅನುಭವಿಸಿದರು.
ಆ ಸಮಯದಲ್ಲಿ, ಶ್ರೀರಂಗನಾಥನ ದಿವ್ಯವಾದ ಕೆಂಪು ಬಣ್ಣದ ವಸ್ತ್ರ ಮತ್ತು ಅವನ ಎದೆಯ ಮೇಲೆ ಧರಿಸುವ ‘ವನಮಾಲೆ’ಯನ್ನು (ಒಂದು ದಿವ್ಯ ಹೂಮಾಲೆ), ಶ್ರೀರಂಗಂ ದೇವಾಲಯದ ಮುಖ್ಯ ಕೈಂಕರ್ಯಪರರಾದ ಉತ್ತಮ ನಂಬಿಯವರು ಚಿನ್ನದ ತಟ್ಟೆಯಲ್ಲಿ ತಮ್ಮ ತಲೆಯ ಮೇಲೆ ಹೊತ್ತು, ದೇವಾಲಯದ ಎಲ್ಲಾ ಸಿಬ್ಬಂದಿಯೊಂದಿಗೆ ಮಠಕ್ಕೆ ಆಗಮಿಸಿದರು. ಜೀಯರ್ ಅವರ ಶಿಷ್ಯರು ಅವರನ್ನು ಸ್ವಾಗತಿಸಲು ತೆರಳಿ, ಅವರಿಗೆ ನಮಸ್ಕರಿಸಿ, ಪೆರುಮಾಳ್ನ ಪ್ರಸಾದವನ್ನು ತಮ್ಮ ಶಿರಸ್ಸಿನ ಮೇಲೆ ಸ್ವೀಕರಿಸಿದರು. ಪೆರಿಯಾಳ್ವಾರ್ ಅವರು ತಮ್ಮ ತಿರುಪ್ಪಳ್ಳಾಂಡು ಪಾಸುರಂ 9 ರಲ್ಲಿ ಉಲ್ಲೇಖಿಸಿರುವಂತೆಯೇ “ಉಡುತ್ತು ಕಳೈ೦ದ ನಿನ್ ಪಿತಹವಾಡೈ ಉಡುತ್ತು ಕ್ಕಳತ್ತದುಂಡು ತೊಡುತ್ತ ತುழாಯ್ ಮಲರ್ ಶೂಡಿಕಳೈ೦ದ ಶೂಡುಮಿ ತ್ತೊಂಡರ್ ಹಳೋಮ್ (ನೀವು ಧರಿಸಿ ತ್ಯಜಿಸಿದ ಉಡುಪು ಮತ್ತು ದೈವಿಕ ತುಳಸಿ ಮಾಲೆಯನ್ನು ನಿಮ್ಮ ಅನುಯಾಯಿಗಳಾದ ನಾವು ಧರಿಸುತ್ತೇವೆ) ಪೆರುಮಾಳ್ ಮೊದಲು ಧರಿಸಿದ್ದ ವಸ್ತ್ರ ಮತ್ತು ಮಾಲೆಯಿಂದ ಅವರು ಜೀಯರ್ ಅವರ ದಿವ್ಯ ಸ್ವರೂಪವನ್ನು ಅಲಂಕರಿಸಿದರು.ದೇವಾಲಯದ ಎಲ್ಲಾ ಸೇವಕರು, ವಿವಿಧ ಆಚಾರ್ಯ ಪುರುಷರು, ಜೀಯರ್ಗಳು, ಏಕಾಂಗಿಗಳು (ಜೀಯರ್ಗಳ ಸಹಾಯಕರು, ಇವರು ಪ್ರಧಾನವಾಗಿ ಬ್ರಹ್ಮಚಾರಿಗಳಾಗಿರುತ್ತಾರೆ) ಹಾಗೂ ಶ್ರೀವೈಷ್ಣವರು ಜೀಯರ್ಗಳನ್ನು ಆರಾಧಿಸಿ, ‘ಸೆಯ್ಯ ತಾಮರೈ ತಾಳಿಣೈ ವಾழிಯೇ’ (ಈ ಅನುವಾದದ 75ನೇ ಭಾಗವನ್ನು ನೋಡಿ) ಎಂಬ ಸಾಲಿನಿಂದ ಆರಂಭವಾಗುವ ಅವರ ‘ತನಿಯನ್’ಗಳನ್ನು ಪಠಿಸಿದರು ಮತ್ತು ಜೀಯರ್ಗಳಿಗೆ ಮಂಗಳಾಶಾಸನವನ್ನು ನೆರವೇರಿಸಿದರು. ಅವರು ಪರಸ್ಪರ ಹೀಗೆಂದು ಹೇಳಿಕೊಳ್ಳುತ್ತಾ, ತೀವ್ರ ದುಃಖದಿಂದ ಒಬ್ಬರನ್ನೊಬ್ಬರು ಸಮಾಧಾನಪಡಿಸಿಕೊಂಡರು: “ರಾಮಾನುಜರನ್ನು ಆರಾಧಿಸಲು ಸಾಧ್ಯವಾಗದಿದ್ದ ಕೊರತೆಯನ್ನು ನಾವು ಜೀಯರ್ ಅವರನ್ನು ಆರಾಧಿಸುವ ಮೂಲಕ ನೀಗಿಸಿಕೊಂಡಿದ್ದೆವು; ಈಗ ಈ ಅವತಾರವೂ ಸಹ ನಮಗೆ ತೀರ್ಥಪ್ರಸಾದವನ್ನು ಅನುಗ್ರಹಿಸಿ ನಮ್ಮನ್ನು ಅಗಲುತ್ತಿದ್ದಾರೆ.”ನಂತರ ಅವರು ‘ಶ್ರೀಚೂರ್ಣ ಪರಿಪಾಲನೆ’ಯನ್ನು (ಜೀಯರ್ ಅವರ ದಿವ್ಯ ಸ್ವರೂಪವನ್ನು ದಿವ್ಯ ಶ್ರೀಚೂರ್ಣದಿಂದ ರಕ್ಷಿಸುವ ಕಾರ್ಯ) ನೆರವೇರಿಸಿ, ಉಳಿದ ಶ್ರೀಚೂರ್ಣವನ್ನು ತಮ್ಮ ಮೇಲೆ ಧರಿಸಿಕೊಂಡರು. ಅವರು ಕರುಣೆಯಿಂದ ಜೀಯರ್ ಅವರ ದಿವ್ಯ ಸ್ವರೂಪವನ್ನು ಪುಷ್ಪಕ ವಿಮಾನದ (ಅನೇಕ ಹೂವುಗಳಿಂದ ಅಲಂಕರಿಸಲ್ಪಟ್ಟ ವಾಹನ) ಮೇಲೆ ಏರಿಸಿದರು; ಅನೇಕ ಶಿಷ್ಯರು ಆ ವಾಹನವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು, ಛತ್ರ-ಚಾಮರಗಳನ್ನು (ದಿವ್ಯವಾದ ಛತ್ರಿ ಮತ್ತು ಚಾಮರ) ಹಿಡಿದು ಸಾಗಿದರು. ನಾನಾ ಬಗೆಯ ವಾದ್ಯಗಳ ನಾದ, ಡೋಲುಗಳ ಬಡಿತ ಮತ್ತು ಶಂಖಗಳ ಧ್ವನಿಯೊಂದಿಗೆ, ಹಾಗೂ ಶ್ಲೋಕದಲ್ಲಿ ವರ್ಣಿಸಿರುವಂತೆಯೇ…
ಪದಾಕ್ತ್ ವಿಜಿನೀಮ್ರಂಯಾಮ್ ದುರ್ಯೋದ್ಕುಷ್ಠ ನಿನಾದನೀಂ
ಸೈಧರಾಜಪದಾಂ ರಾಮ್ಯಾಮ್ ಕೃತ್ಸ್ನಮ್ ಪ್ರಕೀರ್ಣ ಕುಸುಮೋತ್ಕರಾಮ್
ಅವರು ಸುಂದರವಾದ ಧ್ವಜಗಳನ್ನು ನೆಟ್ಟು, ವಿವಿಧ ವಾದ್ಯಗಳನ್ನು ನುಡಿಸಿ ವಾತಾವರಣವನ್ನು ನಾದಮಯವಾಗಿಸಿ, ದಾರಿಯುದ್ದಕ್ಕೂ ನೀರನ್ನು ಪ್ರೋಕ್ಷಿಸಿ ಹಾಗೂ ನಾನಾ ಬಗೆಯ ಹೂವುಗಳನ್ನು ಇರಿಸುವ ಮೂಲಕ ಪಟ್ಟಣವನ್ನು ಮತ್ತು ಜೀಯರ್ ಅವರ ದಿವ್ಯ ಸ್ವರೂಪವನ್ನು ಕೊಂಡೊಯ್ಯುತ್ತಿದ್ದ ಮಾರ್ಗವನ್ನು ಅಲಂಕರಿಸಿದರು; ಅಲ್ಲದೆ, ಆ ಮಾರ್ಗವನ್ನು ವಿವಿಧ ಹೂವುಗಳು ಹಾಗೂ ಫಲಭರಿತ ಮರಗಳಿಂದ ಸಿಂಗರಿಸಿದರು.ಅವರು ಕಬ್ಬುಗಳನ್ನು ಹೊತ್ತುಕೊಂಡು ‘ರಾಮಾನುಜ ನೂಟ್ರಂದಾದಿ’ಯಂತಹ ಪಾಸುರಗಳನ್ನು ಪಠಿಸುತ್ತಿದ್ದರು. ಅವರು ಪವಿತ್ರ ಜಲ, ಅರಳು ಮತ್ತು ಹೂವುಗಳನ್ನು ಪ್ರೋಕ್ಷಿಸುತ್ತಾ, “ಮಣವಾಳ ಮಾಮುನಿಗಳು ದರ್ಶನದಲ್ಲಿ ದಿವ್ಯಧಾಮವನ್ನು ಏರಿದರು” ಎಂದು ಘೋಷಿಸುತ್ತಾ ‘ತಿರುಚ್ಚಿನ್ನಂ’ (ಸಾಮಾನ್ಯವಾಗಿ ರಾಜರು ಅಥವಾ ದೇವತೆಗಳ ಮೆರವಣಿಗೆಯ ಸಮಯದಲ್ಲಿ ಊದಲಾಗುವ ಒಂದು ಜೋಡಿ ತುತ್ತೂರಿಗಳಂತಹ ವಾದ್ಯ) ಅನ್ನು ಊದುತ್ತಿದ್ದರು. ಮೆರವಣಿಗೆಯು ಸಾಗುತ್ತಿದ್ದಾಗ ಮಹಿಳೆಯರು ದೀಪಾರತಿ ಬೆಳಗಿದರು ಮತ್ತು ಅಲ್ಲಿದ್ದವರೆಲ್ಲರೂ ಪವಿತ್ರ ಬೀದಿಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದರು.
ತಿರುಪ್ಪಳ್ಳಿ ವಿಧಿವಿಧಾನಗಳನ್ನು ನೆರವೇರಿಸುವುದು
[ನಮ್ಮ ಸಂಪ್ರದಾಯದಲ್ಲಿ ಸನ್ಯಾಸಿಗಳಿಗೆ ಅಗ್ನಿಯೊಂದಿಗೆ ಯಾವುದೇ ಸಂಪರ್ಕವಿರಬಾರದು ಎಂಬ ನಿಯಮವಿರುವುದರಿಂದ, ಅವರನ್ನು ದಹನ ಮಾಡುವ ಬದಲು ಭೂಮಿಯಲ್ಲಿ ಸಮಾಧಿ ಮಾಡುವ ಪದ್ಧತಿಯನ್ನು ‘ತಿರುಪ್ಪಳ್ಳಿ’ ಎಂದು ಕರೆಯಲಾಗುತ್ತದೆ]. ಪೆರುಮಾಳಿನ ದಿವ್ಯ ಪಾದಕಮಲಗಳಿಂದ ದೂರವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ, ಜೀಯರ್ ಅವರ ದಿವ್ಯ ಶರೀರವನ್ನು ಆದಿಕೇಶವ ಪೆರುಮಾಳ್ ದೇವಾಲಯದ ಸಮೀಪವಿರುವ ‘ತವರಾಸನ್ ಪಡುಗೈ’ಗೆ (ರಾಮಾನುಜರು ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ನದಿತೀರದ ಪ್ರದೇಶ) ಕೊಂಡೊಯ್ಯಲಾಯಿತು. ಆ ಸಮಯದಲ್ಲಿ, ಭೂಮಿದೇವಿಯು ರಾಜ ಜನಕನ ದಿವ್ಯ ಪುತ್ರಿಯಾದ ಸೀತಾಮಾತೆಯನ್ನು ತನ್ನ ಮಡಿಲಲ್ಲಿ ಧರಿಸಿ ಹೇಗೆ ಆಧಾರ ನೀಡಿದ್ದಳೋ, ಹಾಗೆಯೇ ಮಣವಾಳ ಮಾಮುನಿಗಳನ್ನೂ ತನ್ನ ಮಡಿಲಲ್ಲಿ ಧರಿಸಿ ಸಂತೋಷಪಟ್ಟಳು. ಆಳವಂದಾರ್ ಮತ್ತು ಎಂಪೆರುಮಾನಾರ್ ಅವರಂತೆಯೇ, ಜೀಯರ್ ಅವರ ದಿವ್ಯ ಶರೀರವನ್ನು ಕೂಡ ಯತಿಗಳಿಗೆ (ಸನ್ಯಾಸಿಗಳಿಗೆ) ವಿಹಿತವಾದ ನಿಯಮಗಳಿಗನುಸಾರವಾಗಿ ಭೂಮಿಯಲ್ಲಿ ಸಮಾಧಿ ಮಾಡಲಾಯಿತು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಮೂಲ : https://granthams.koyil.org/2021/10/26/yathindhra-pravana-prabhavam-99-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org